ಶಿವಮೊಗ್ಗ:ಭದ್ರಾ ನಾಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಜಿಂಕೆ ಮರಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.
ಏನಾಯ್ತು?: ಇಂದು ಬೆಳಗ್ಗೆ ಭದ್ರಾವತಿ ತಾಲೂಕಿನ ಅಶೋಕನಗರದ ಸಮೀಪ ಜಿಂಕೆಮರಿ ನೀರು ಕುಡಿಯಲು ಭದ್ರಾ ನಾಲೆಗಿಳಿದಿದೆ. ಇದನ್ನು ಕಂಡ ಸ್ಥಳೀಯರು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಶಿವಮೊಗ್ಗದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಜಿಂಕೆ ಬೇರೆಡೆ ಹೋಗದಂತೆ ನೋಡಿಕೊಂಡಿದ್ದಾರೆ. ಬಳಿಕ ನೀರಿಗಿಳಿದು ಜಿಂಕೆಯನ್ನು ಹಿಡಿಯಲು ಯತ್ನಿಸಿದಾಗ, ಅದು ಭಯದಿಂದ ಓಡಿದೆ.
ಆದರೂ ಸಹ ಜಿಂಕೆಯನ್ನು ಹಿಡಿದು ಹಗ್ಗ ಕಟ್ಟಿ ಮೇಲಕ್ಕೆತ್ತಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅರಣ್ಯ ಇಲಾಖೆಯವರು ಮಾವಿನಕೆರೆ ವಿಭಾಗದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.